ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ (Cyber Command Centre), ತನಿಖಾ ಘಟಕಕ್ಕೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. ಇದರೊಂದಿಗೆ ದೇಶದಲ್ಲಿಯೇ ಮೊತ್ತ ಮೊದಲ ಸೈಬರ್ ಕಮಾಂಡ್ ಸೆಂಟರ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳ (Cyber Crime) ವಿರುದ್ಧ ಈ ತನಿಖಾ ಘಟಕ ಕಾರ್ಯಾಚರಣೆ ನಡೆಸಲಿದೆ. ಘಟಕದ ಡಿಐಜಿಯಾಗಿ ಭೂಷಣ್ ಬೊರಸೆ ಅವರನ್ನು ನೇಮಕ ಮಾಡಲಾಗಿದೆ. ಐಜಿಪಿ, ಎಸ್ಪಿ ಸೇರಿದಂತೆ ಇತರ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ.
ಸೈಬರ್ ಕಮಾಂಡ್ ಹೊಣೆಗಾರಿಕೆಯನ್ನು ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಐಪಿಎಸ್ ಅಧಿಕಾರಿಗೆ ವಹಿಸಲಾಗುತ್ತದೆ. ಪ್ರಣಾವ್ ಮೊಹಾಂತಿ ಅವರಿಗೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದ್ದು, ಈ ವಿಚಾರವಾಗಿ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಸೈಬರ್ ಕಮಾಂಡ್ ಸೆಂಟರ್ ಕೆಲಸವೇನು?
ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್ವೇರ್, ಹಿಂಬಾಲಿಸುವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್ಲೈನ್ ಅಪರಾಧಗಳು, ಸೆಕ್ಸ್ಟಾರ್ಷನ್, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್ಫೇಕ್ಗಳು, ಐಡೆಂಟಿಟಿ ತೆಫ್ಟ್, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ತಪ್ಪು ಮಾಹಿತಿ ಇತ್ಯಾದಿಗಳ ವಿರುದ್ಧ ಸೈಬರ್ ಕಮಾಂಡ್ ಸೆಂಟರ್ ಕಾರ್ಯಾಚರಣೆ ನಡೆಸಲಿದೆ. ಈ ಮೊದಲು ಸೈಬರ್ ಕ್ರೈಂ ಮತ್ತು ನಾಕ್ರೊಟಿಕ್ಸ್ ವಿಭಾಗವು ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿತ್ತು.